ನಡೆದಿದೆ ಹೋರಾಟ ಎನ್ನೊಳಗೆ
ಅನುದಿನ ಅನುಕ್ಷಣ ಬಿಡದೆ ಕಾಡಿದೆ
ನೆಲೆಯು ಕುಸಿದು ಭರವಸಯೇ ಬತ್ತುತ್ತಿದೆ
ಹಲವರು ಹಚ್ಚಿಕೊಂಡ ಬಣ್ಣ ಬಯಲಾಗುತ್ತಿದೆ
ನನ್ನದೆನ್ನುವ ಭಾವ ದೂರವಾಗಿ ಬರೀ ಶೂನ್ಯ ತುಂಬುತ್ತಿದೆ
ನಮ್ಮದೆನ್ನುವ ನೋವು ಹಿಂಡಿ ಹಿಪ್ಪೆಯಾಗಿಸುತ್ತಿದೆ
ಗೌರವ ಮನ್ನಣೆಗಳು ಕಡಿಮೆಯಾಗುವ ಮುನ್ನವೇ
ನಿರೀಕ್ಷೆಗಳು ಹುಸಿಯಾಗಿ ಸೋಲು ಆವರಿಸುವ ಕ್ಷಣವೇ
ಮರೆಯಾಗಿ ಹೋಗಿಬಿಡು ಹೆಸರ ಮರೆತು
ತೊರೆಯಾಗಿ ಹರಿದು ಬಿಡು ಹೊಸ ದಾರಿ ಹಿಡಿದು
ಯಾರಿಗೂ ಯಾರು ಅನಿವಾರ್ಯವಲ್ಲ
ಪರಿಸ್ಥಿತಿಯ ಕೈಗೊಂಬೆಗಳೇ ನಾವೆಲ್ಲಾ
ಆಸರೆ ನೀಡಿ ಸಲುಹಿದ ತಾಣ ತಣ್ಣಗಿರಲಿ
ನಂಬಿರುವ ಜನರು ಇದಕೆ ಕೈ ಕೊಡದಿರಲಿ
ದೈವ ನಿರ್ಣಯದ ಮುಂದೆ ನಮ್ಮದೇನು
ಏನಾಗಬೇಕು ಅದನ್ನು ತಡೆಯಲು ನಾವೇನು
ಬರುವ ತಿರುವುಗಳಲಿ ಎದೆ ಗಟ್ಟಿ ಮಾಡಿಕೊಂಡು ಸಾಗಬೇಕು
ಜಯಾಪಜಯ ಮಾನಾಪಮಾನವನ್ನು ಆ ಭಗವಂತನಿಗೆ ಬಿಡಬೇಕು…..ಬಿಡಬೇಕು…..
– ಕೆ.ಎಂ ಶರಣಬಸವೇಶ

