ಒಂದು ಮನೆಯಲ್ಲಿ ಹಿರಿಯರಾದ ಗಂಡ ಹೆಂಡತಿ ವಾಸವಿದ್ದರು. ಹೆಂಡತಿಗೆ ಇನ್ನೊಬ್ಬರನ್ನು ಕಂಡರೆ ಇನ್ನಿಲ್ಲದ ಕುತೂಹಲ. ಅದಕ್ಕಾಗಿ ಬಿಡುವಿನ ವೇಳೆಯಲ್ಲಿ ತನ್ನ ಮನೆಯ ಕಿಟಕಿಯೊಳಗಿಂದ ಬೀದಿಯ ಕಡೆಗೆ ನೋಡುತ್ತಲೇ ಇರುತ್ತಿದ್ದಳು. ಅವಳಿಗೆ ವಿಚಿತ್ರವೇನಾದರೂ ಕಂಡಿತೆAದರೆ ಸಂಜೆ ಮನೆಗೆ ಬಂದ ಗಂಡನಿಗೆ ಹೇಳುತ್ತಿದ್ದಳು. ಹಾಗೆ ಪ್ರತಿದಿನ ಸಂಬAಧವಿಲ್ಲದಿದ್ದರೂ ಇನ್ನೊಬ್ಬರ ಬಗ್ಗೆ ಏನಾದರೂ ಮಾತನಾಡುವ ಸ್ವಭಾವದವಳು. ಗಂಡ ಮಾತ್ರ ಏನೂ ಪ್ರತಿಕ್ರಿಯೆ ಇಲ್ಲದೆ ತಣ್ಣಗಿರುತ್ತಿದ್ದ.
ಹೀಗಿರುವಾಗ ಎದುರು ಮನೆಗೆ ಯಾರೋ ಹೊಸದಾಗಿ ಮದುವೆಯಾದ ದಂಪತಿಗಳು ವಾಸಕ್ಕೆ ಬಂದರು. ಹಿರಿಯಾಕೆಗೆ ಕುತೂಹಲ ಹೆಚ್ಚಾಯಿತು. ದಿನವೂ ಹೊಸಮನೆಗೆ ಬಂದಿರುವ ಹುಡುಗಿಯ ಬಗ್ಗೆ ಏನಾದರೊಂದು ಮಾತನಾಡುತ್ತಲೇ ಇದ್ದಳು. ಅವಳು ಮಾಡುವ ಪ್ರತಿ ಕೆಲಸದಲ್ಲ್ಲಿಯೂ ಏನಾದರೊಂದು ಲೋಪತೆಗೆದು ಆಡಿಕೊಳ್ಳುತ್ತಿದ್ದಳು.
ಒಂದಿ ದಿನ ಎದುರು ಮನೆಯ ಹೆಂಗಸು ಬಿಳಿಯದಾದ ಬಟ್ಟೆಗಳನ್ನು ತೊಳೆದು ಮನೆಮುಂದೆ ಕಟ್ಟಿದ್ದ ಹಗ್ಗದ ಮೇಲೆ ಒಣಗಲು ಹಾಕಿದ್ದಳು. ಶುರುವಾಯಿತು ಹಿರಿಯಾಕೆಯ ಕಿಟಿಕಿಯ ಮೂಲಕ ಅವಲೋಕನ. “ಆ ಹುಡುಗಿಗೆ ಬಟ್ಟೆ ಒಗೆಯಲು ಬರುವುದಿಲ್ಲವೆಂದು ಕಾಣಿಸುತ್ತದೆ. ಕೊಳೆಯೇ ಹೋಗಿಲ್ಲ. ಅಲ್ಲದೆ ಎಂತಹ ಸೋಪಿನಪುಡಿಯನ್ನು ಬಳಸಬೇಕೆಂಬ ತಿಳುವಳಿಕೆಯೂ ಇಲ್ಲ” ಎಂದು ಆಡಿಕೊಂಡರು. ರಾತ್ರಿ ತನ್ನ ಗಂಡನಿಗೆ ಇವೆಲ್ಲ ಮಾತುಗಳನ್ನು ಹೇಳಿ ತನ್ನ ಚಪಲ ತೀರಿಸಿಕೊಂಡಳು.
ಮಾರನೆಯ ದಿನ ಗಂಡ ಮನೆಯಲ್ಲೇ ಇದ್ದರು. ಈಕೆ ಕೆಲಸವನ್ನೆಲ್ಲ ಮುಗಿಸಿ ಎಂದಿನಂತೆ ಪಕ್ಕದ ಮನೆಯತ್ತ ಕಿಟಕಿಯ ಮೂಲಕ ಕಣ್ಣುಹಾಯಿಸಿದಳು. ಎದುರು ಮನೆಯ ಹೆಂಗಸು ಬಟ್ಟೆಗಳನ್ನು ತೊಳೆದು ಹಗ್ಗದ ಮೇಲೆ ಹರವಿದ್ದಳು. ಆದರೆ ಎಲ್ಲ ಬಟ್ಟೆಗಳೂ ಬಹಳ ಶುಭ್ರವಾಗಿದ್ದವು. ಬಿಳಿಯ ಬಟ್ಟೆಗಳಂತೂ ಹೊಳೆಯುತ್ತಿದ್ದವು. ಈಕೆ “ನೋಡಿದಿರಾ ಎದುರು ಮನೆಯ ಹುಡುಗಿ ಈಗ ಚೆನ್ನಾಗಿ ಬಟ್ಟೆ ಒಗೆಯುವುದನ್ನು ಕಲಿತುಕೊಂಡಿದ್ದಾಳೆ ಅದರಿಂದಲೇ ಅವಳು ಒಣಗಲು ಹಾಕಿರುವ ಬಟ್ಟೆಗಳು ಶುಭ್ರವಾಗಿ ಕಾಣುತ್ತಿವೆ” ಎಂದಳು.
ಆಗ ಅವಳ ಪತಿ “ಅಂತದ್ದೇನೂ ಇಲ್ಲ. ಆಕೆ ಪ್ರತಿದಿನವೂ ಬಟ್ಟೆಗಳನ್ನು ಶುಭ್ರವಾಗಿಯೇ ತೊಳೆಯುತ್ತಾಳೆ. ಆದರೆ ನೀನು ನೋಡುತ್ತಿದ್ದ ದೃಷ್ಟಿಯಲ್ಲೇ ದೋಷವಿತ್ತು. ನಮ್ಮ ಮನೆಯ ಕಿಟಕಿಯ ಗಾಜುಗಳನ್ನು ನಾನು ಬೆಳಗ್ಗೆ ನೀನು ಏಳುವಷ್ಟರಲ್ಲಿ ಚೆನ್ನಾಗಿ ಸ್ವಚ್ಛ ಮಾಡಿದ್ದೇನೆ. ಮೊದಲು ಅದರಲ್ಲಿದ್ದ ಕೊಳೆಯ ದೆಸೆಯಿಂದ ನಿನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ನಾವು ಇನ್ನೊಬ್ಬರನ್ನು ನೋಡುವ ದೃಷ್ಟಿ ಶುದ್ಧವಾಗಿರಬೇಕು. ನಮ್ಮಲ್ಲೇ ದೋಷವಿಟ್ಟುಕೊಂಡು ಇನ್ನೊಬ್ಬರನ್ನು ದೂಷಿಸಬಾರದು.” ಎಂದರು. ಆಕೆ ಸುಮ್ಮನಾದಳು.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

