ನಿಂದಕರಿರಬೇಕು ಜಗದೊಳಗೆ….

Share Button

 

Jayashreeb

ಇಂಗ್ಲಿಷ್ ನಲ್ಲಿ ಒಂದು ಸಾಹಿತ್ಯ ಪ್ರಕಾರವಿದೆ. ಲೈಬಲ್ (Libel) ಎಂದು ಅದರ ಹೆಸರು. ಜೀವಂತ ಇರುವ ವ್ಯಕ್ಯಿಗಳನ್ನು ಅಣಕಿಸುತ್ತ ಬರೆಯುವ ಪ್ರಕಾರ ಅದು. ಈಗಿನ ಹೆಚ್ಚಿನ ಟ್ಯಾಬ್ಲಾಯ್ಡ್ಗಳಲ್ಲಿ, ಸೆನ್ಸೇಶನ್ ಹುಟ್ಟಿಸುವ ಗಾಸಿಪ್ ಕಾಲಂಗಳಲ್ಲಿ ಕೆಲವೊಮ್ಮೆ ನೇರಾನುನೇರ, ಇನ್ನು ಕೆಲವೊಮ್ಮೆ ವ್ಯಂಗ್ಯವಾಗಿ ತಮಗೆ ಕಂಡರಾಗದವರನ್ನು ಬ್ಲಾಕ್ ಮೈಲ್ ಮಾಡುವ ಬರಹ ಪ್ರಕಾರಗಳು ಇವು. ಅದೇ ರೀತಿ  ‘ಸಟೈರ್ (Satire)’ ಎನ್ನುವುದು ಇನ್ನೊಂದು ಪ್ರಕಾರ. ಇದಕ್ಕೆ ಅನೇಕ ರಾಜಕೀಯ, ದೇಶ ಕಾಲಕ್ಕೆ ಅನ್ವಯವಾಗುವ ಆಯಾಮಗಳೂ ಇರುತ್ತವೆ. ಉದಾಹರಣೆಗೆ ಸಲ್ಮಾನ್ ರಶ್ದಿಯ ‘ಮಿಡ್ ನೈಟ್ ಚಿಲ್ಡ್ರನ್’ . ರವಿ ಬೆಳಗೆರೆಯವರ ‘ಕಾಮರಾಜ ಮಾರ್ಗ’ ಹೀಗೆ ನಾವು ಅಲ್ಲಿಯ ಪಾತ್ರಗಳನ್ನು ಪ್ರಸ್ತುತ ರಾಜಕೀಯದೊಂದಿಗೆ ಸಮಾನಾಂತರವಾಗಿ ಅನ್ವಯಿಸಿಕೊಳ್ಳಬಹುದು.

ಒಂದು ಸಾಹಿತ್ಯ ಪ್ರಕಾರವಾಗಿ ‘ ಲೈಬಲ್’ , ‘ಸಟೈರ್’ ಸಾಹಿತ್ಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ ಎಂದೇ ಹೇಳಬೇಕು. ವ್ಯಂಗ್ಯದ ಚಾಟಿಯೇಟಿನಿಂದ ಜನ ಮಾನಸವನ್ನು ಬಡಿದೆಬ್ಬಿಸುವ, ಅವರ ಕುಂದು ಕೊರತೆಗಳನ್ನು ಅವರಿಗೆ ತೋರಿಸಿ ಅವರನ್ನು ತಿದ್ದುವ ಸಾಮಾಜಿಕ ಉದ್ದೇಶವೂ ಇದಕ್ಕಿದೆ. ಓರ್ವ ಸಾಹಿತ್ಯದ ವಿದ್ಯಾರ್ಥಿಯಾಗಿ, ಅಷ್ಟೋ ಇಷ್ಟೋ ಪಾಠವನ್ನೂ ಹೇಳಿಕೊಂಡು ಬದುಕುತ್ತಿರುವ ನನಗೆ ಈ ಬರಹದ ಬೇರೆ ಬೇರೆ ಆಯಾಮಗಳು ದಂಗು ಬಡಿಸುತ್ತವೆ. ಕೆಲವೊಮ್ಮೆ ಈ ಬರಹಗಳು ಯಾವುದೇ ‘ಗಾಸಿಪ್’ಗೆ ಕಡಿಮೆ ಇಲ್ಲ ಹಾಗೂ ಅದು ಯಾರನ್ನು ಚುಚ್ಚಿ ನೋಯಿಸುತ್ತದೆಯೋ ಅದನ್ನು ಅವರು ಜೀವನಪೂರ್ತಿ ಮರೆಯಲಾರರು.

 

libel at its best    Satire

 

ಉದಾಹರಣೆಗೆ,  ಹಲವಾರು ವರ್ಷಗಳಿಂದಲೂ ಸಾಮಾಜಿಕ ಕಥೆಗಳನ್ನು, ಲೇಖನಗಳನ್ನು ಬರೆದು ಗುರುತಿಸಲ್ಪಟ್ಟವರೊಬ್ಬರು, ತಮ್ಮ  ಹೆಚ್ಚಿನ ಕತೆಗಳಲ್ಲಿ ಅತ್ಯಂತ ಸಜ್ಜನ ಸೊಸೆಯೊಬ್ಬಳು ತನ್ನ ಅತ್ತೆ, ಗಂಡನ ಅಕ್ಕ ತಂಗಿಯರು, ಅವರ ಮಕ್ಕಳಿಂದ ಪಡಬಾರದ ಅನ್ಯಾಯ ಪಡುತ್ತಿರುತ್ತಾಳೆ ಹಾಗೂ ಈ (ಕ್ರೂರ! ) ಅತ್ತಿಗೆಯಂದಿರಿಗೆ ತಕ್ಕ ಶಾಸ್ತಿಯಾಗುತ್ತದೆ…. ಇತ್ಯಾದಿ ಅದೇ ಚರ್ವಿತಚರ್ವಣ ಸಾಹಿತ್ಯ ಸರಕನ್ನು ತುಂಬಿ ಆಗಾಗ ಬರೆಯುತ್ತಲೇ ಇರುವ ಸಂದರ್ಭದಲ್ಲಿ , ಅದೇ ಊರಿನಲ್ಲಿ ಬದುಕುತ್ತಿರುವ , ಹಾಗೂ ಪತ್ರಿಕೆಗಳಲ್ಲಿ ತಾವೇ ಖಳನಾಯಕಿಯರಾಗಿ ಬಿಂಬಿತವಾಗುವ ಸೌಭಾಗ್ಯ ಪಡೆದ ಈ ಪಾಪದ ಗೃಹಿಣಿಯರ ಪಾಡು ಹೇಳ ತೀರದು. ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎನ್ನುವುದು ಎಲ್ಲ ಸಾಹಿತಿಗಳ ಹಕ್ಕು ಎನ್ನುವುದನ್ನು ಗೌರವಿಸುತ್ತಲೇ ಕೆಲವು ಅಭಿಪ್ರಾಯಗಳು.(ಇವು ಕೇವಲ ಅಭಿಪ್ರಾಯಗಳು ; ನಿಂದೆ ಅಲ್ಲ)

ಯಾವುದೇ ವ್ಯಕ್ತಿ ಸಂಪೂರ್ಣ ಒಳ್ಳೆಯವರು ಅಥವಾ ಸಂಪೂರ್ಣ ಕೆಟ್ಟವರಾಗಲು ಸಾಧ್ಯವಿಲ್ಲ ಹಾಗೂ ಮಾನವ ಜೀವಿತ, ಅದರಲ್ಲಿನ ಏಳು ಬೀಳುಗಳು ಸಂಕೀರ್ಣವೂ ನಮ್ಮ ನಿಯಂತ್ರಣಕ್ಕೆ ಸಿಗದವೂ ಆಗಿರುತ್ತವೆ. ಹೀಗಾಗಿಯೇ ಯಾವುದೇ ಸಾಹಿತಿ ಪಾತ್ರಗಳನ್ನು ಸೃಜಿಸುವಾಗ ಅವುಗಳಲ್ಲಿನ ಸಂಕೀರ್ಣತೆಯನ್ನು, ಬದುಕಿನ ಬೇರೆ ಬೇರೆ ಮಜಲುಗಳನ್ನು ಸಮನ್ವಯ ದೃಷ್ಟಿಯಿಂದ ನೋಡುವ ಉದಾರತೆ ಹೊಂದಿರಬೇಕು.

ಅಕ್ಷರವೆನ್ನುವುದು, ಬರೆಯುವ ಕಲೆಗಾರಿಕೆ ಎನ್ನುವುದು ದೈವ ನಮಗಿತ್ತ ವರ. ಅದನ್ನು ಇನ್ನಿತರರನ್ನು ಬ್ಲಾಕ್ ಮೇಲ್ ಮಾಡಲು ಬಳಸುವ ಸಣ್ಣ ಬುದ್ಧಿ, ನೀಚತನ ನನಗೆಂದಿಗೂ ಬಾರದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ಈ ಲೇಖನಕ್ಕೆ ಮುಕ್ತಾಯ..

 – ಜಯಶ್ರೀ ಬಿ ಕದ್ರಿ

10 Responses

  1. Hema, says:

    ದುರುದ್ದೇಶದ ಬರಹಗಳಿಗೂ ಸಾಹಿತ್ಯದ ನೆಲೆಗಟ್ಟು ಇದೆಯೆ? ನನಗೆ ಇದು ಹೊಸ ವಿಷಯ. ಏನೇ ಆದರು ‘ಮಂಥರೆ’ ಬುದ್ಧಿಯುಳ್ಳವರಿಂದ ಸಂಸಾರದಲ್ಲಿ ನೆಮ್ಮದಿ ಕದಡುವುದು ಖಂಡಿತ.

  2. Niharika says:

    ನಯವಂಚಕತನಕ್ಕೂ ಸಾಹಿತ್ಯದ ಬಳಕೆ ಮಾಡುವುದೇ ..ಛೇ.

  3. Rekha says:

    ಇದ್ಯಾವ ತರ ಸಾಹಿತ್ಯ ಜಯಶ್ರೀ ಅವರೇ…ಕೇಳೇ ಇರ್ಲಿಲ್ಲಾ ?
    ಆದ್ರೂ ಇಂಥ ಬರಹಗಳನ್ನ ಪ್ರೋತ್ಸಾಹಿಸಬಾರ್ದು ಅಂತ ನನಗನಿಸುತ್ತೆ. ಇದು ತಪ್ಪಲ್ವಾ?

  4. Ranganath Nadgir says:

    ಅರ್ಥ ಪೂರ್ಣವಾದ , ಎಲ್ಲ ಸಹೃದಯರು ಒಪ್ಪಲೇ ಬೇಕಾದ ,
    ಲೇಖನವು ತುಂಬಾ ಚೆನ್ನಾಗಿ ತಮ್ಮ ಲೇಖನಿಯಿಂದ ಹೊರಬಂದಿದೆ,

  5. Srinivas Srikhadi says:

    ಈ ನಾಣ್ನುಡಿ ಮಾತನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಸಿದ್ದರೆ ತಪ್ಪುನ್ನು ತಿದ್ದುಕೋಳ್ಳೊದ್ದಕ್ಕೆ ಸಾದ್ಯ.

  6. savithri s bhat says:

    ಲೇಖನ ತುಂಬಾ ಚೆನ್ನಾಗಿ ಬರೆದು ಉಪಸ೦ಹಾರ ಮತ್ತೂ ಇಷ್ಟವಾಯಿತು.

  7. jayanada says:

    ಚೆನ್ನಾಗಿದೆ

  8. ಒಳ್ಳೆಯ ಅಂಶಗಳನ್ನು ಓದುಗರ ಎದುರಿಗೆ ಇರಿಸಿದ್ದೀರಿ . ಅಭಿನಂದನೆಗಳು .

  9. Deekshith Shettigar Konaje says:

    ತುಂಬಾ ಇಷ್ಟ ಆಯಿತು ಲೇಖನ. ನಿಜ ಅಕ್ಷರವನ್ನು ಬ್ಲಾಕ್ ಮೇಲ್ ಮಾಡಲು ಬಳಸಬಾರದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: