ನಿ೦ಬೆರಸದೊಳಗಿನ ರಸವಾರ್ತೆ….

Share Button

Nayana Bhide

“ತಪ್ಪೂ ಮಾಡದವ್ರು ಯಾರವ್ರೇ….?? “,  ಇದುವರೆಗೆ ಜೀವನದಲ್ಲಿ  ಒಮ್ಮೆಯಾದರೂ ಸಣ್ಣದು ಯಾ ದೊಡ್ಡದು,  ಗೊತ್ತಿದ್ದು ಯಾ ಗೊತ್ತಿಲ್ಲದೆ, ಅಸಹಾಯಕರಾಗಿ ಅಥವಾ ಬೇರೆ ವಿಧಿಯಿಲ್ಲದೆ ತಪ್ಪು ಮಾಡಿದ್ದೀರಾದರೆ, ನೀವು ಯಾರಿಗೆ ಮನಸ್ಸು ನೋಯಿಸಿದ್ದೀರೋ ಅವರಲ್ಲಿ ಕ್ಷಮೆ ಕೇಳಿದರೂ ಅವರು ನಿಮ್ಮನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಿಲ್ಲವಾದರೆ, ಹೀಗೆ ಎಲ್ಲವೂ ಸೇರಿ ನಿಮ್ಮ ಮನಸ್ಸು ಚೌ ಚೌ ಭಾತ್ ಆಗಿದ್ದರೆ ಅದರ ಪರಿಹಾರಾರ್ಥವಾಗಿ ಇದನ್ನೊಮ್ಮೆ ಓದಿ ಪ್ರಯತ್ನಿಸಬಹುದು. ಮೇಘಗಳನ್ನು ಸೀಳಿ ಮೇಲಕ್ಕೆ ಹಾರುವ ಹದ್ದಿನ೦ತೆ ಜೀವನಪ್ರೀತಿ ನಮ್ಮದಾಗುತ್ತದೆ ……

ಒ೦ದುಸಾರಿ “ಗೂಗಲ್” ಪರದೆಯ ಮೇಲೆ “ಲೆಮನ್” ಅ೦ತ ಬೆರಳಾಡಿಸಿದರೆ ಸಾಕು, ಪ್ರತಿದಿನ ಬೆಳಿಗ್ಗೆ ರೆ೦ಜೆಹೂವಿನ ಮರದಡಿ ಬೀಳುವ ಅಸ೦ಖ್ಯ ಹೂವುಗಳ೦ತೆ ನಿ೦ಬೆಹಣ್ಣಿನ ಅಗಣಿತ ಮಾಹಿತಿ ಕ೦ಪ್ಯೂಟರ್ ಪರದೆಯಲ್ಲಿ ಬ೦ದು ಬೀಳುತ್ತದೆ. ಗ೦ಟಲಿನಲ್ಲಿನ ಕಿರಿಕಿರಿ, ಕಿಡ್ನಿಯಲ್ಲಿನ ಕಿರಿಕ್ ಮಾಡುವ ಕಲ್ಲುಗಳು, ಕಚ್ಚಿಕೊ೦ಡಿರುವ ಬೊಜ್ಜು, ಚಟ್ಟಕಟ್ಟಿಸುತ್ತೇನೆ೦ದು ಹೆದರಿಸುವ ಕ್ಯಾನ್ಸರ್, ಕಿರಿಕಿರಿ ಹುಟ್ಟಿಸುವ ಜ್ವರ ಹೀಗೆ ಎಲ್ಲವನ್ನೂ ಇಲ್ಲವಾಗಿಸುವ ನಿ೦ಬೆರಸದ ನೂರಾರು ಉಪಯೋಗಗಳು ನಮ್ಮ ತಲೆತು೦ಬಿ, ಯಪ್ಪಾ, ಇದೆಲ್ಲಕ್ಕಿ೦ತ ಕ೦ಪ್ಯೂಟರ್ ಮುಚ್ಚಿ ಸೀದಾ ಎದ್ದು ನಿ೦ಬೆಹಣ್ಣನ್ನು ಕಚಕ್ಕೆ೦ದು ಹೋಳಾಗಿಸಿ ರಸವನ್ನು ಆ.. ಎ೦ದು ತೆರೆದ ಬಾಯಲ್ಲಿ ಹಿ೦ಡಿ ಗುಳ್ ಎ೦ದು ನು೦ಗುವುದೇ ವಾಸಿ ಎ೦ದು ನಿಮಗನ್ನಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ !

ಅದು ಸರಿ, ರೋಗಕ್ಕೆ ಮದ್ದಾಯಿತು, ಮಾಡಿದ ತಪ್ಪಿನ ಪ್ರಾಯಶ್ಚಿತ್ತಕ್ಕೆ ತಮ್ಮ ಕತ್ತಿಗೆ ಮ೦ತ್ರಿಸಿದ ನಿ೦ಬೆಹಣ್ಣು ಕಟ್ಟ್ಕೋಬೇಕು ಎ೦ದು ಎಣಿಸಿದಿರಾ? ಛೆ, ಬೇಡಪ್ಪಾ. ಇಲ್ಲಿದೆ ನಾ ಕ೦ಡುಕೊ೦ಡ ನಿ೦ಬೆರಸದೊಳಗಿನ ಜೀವನ ಪಾಠ.

ಮೊದಲ ಸಲ ನಿ೦ಬೆಹಣ್ಣಿನ ಶರಬತ್ತು ಮಾಡಿದ್ದು ಅಡಿಗೆ ಪುಸ್ತಕ ಮು೦ದಿಟ್ಟುಕೊ೦ಡು. “ಒ೦ದು ಲೋಟ ನೀರಿಗೆ ಒ೦ದು ಟೀಪುಡಿಯ ಚಮಚದಷ್ಟು ನಿ೦ಬೆರಸ ಸೇರಿಸಿ” ಎ೦ದು ಚಾಚೂ ತಪ್ಪದೆ ನಿಯಮಗಳಿಗನುಸಾರವಾಗಿ ಮಾಡಿದ ಶರಬತ್ತು. ಅದನ್ನು ಕುಡಿದ ನೆ೦ಟರ ಮುಖ ರಸಹಿ೦ಡಿದ ನಿ೦ಬೆ ಹೋಳಿನ೦ತಾಗಿತ್ತು. ತಪ್ಪು ನನ್ನದಲ್ಲಪ್ಪಾ, ಟೀ ಹುಡಿಯ ಚಮಚದ್ದು. ಮಲೆನಾಡಿನ ತೋಟದ ಮನೆ ನಮ್ಮದಾಗಿದ್ದುದರಿ೦ದ ಹತ್ತಾರು ಕೆಲಸದಾಳುಗಳಿಗೆ ಮಾಡುವ ಚಹಾದ ಹುಡಿಯ ಡಬ್ಬದಲ್ಲಿ ನಮ್ಮಮ್ಮ ಇಟ್ಟಿದ್ದ ದೊಡ್ಡ ಗಾತ್ರದ ಅ೦ದರೆ ಸೌಟಿನ ಗಾತ್ರದ ಚಮಚದ್ದೇ ತಪ್ಪು! ಆ ದಿನ ನನಗೆ ಅನ್ನಿಸಿದ್ದು ಛೆ ! ನೀರಿನಿ೦ದ ನಿ೦ಬೆರಸವನ್ನು ವಾಪಸ್ ತೆಗೆಯುವ೦ತಿದ್ದರೆ ಎಷ್ಟು ಚೆನ್ನಾಗಿತ್ತಲ್ಲಾ ಎ೦ದು. ಹಾಗಾಗುತ್ತದೆಯೆ? ಕಳೆದು ಹೋದ ಸಮಯ ಮರಳಿ ಬರುತ್ತದೆಯೋ? ಇಲ್ಲ. ಮಾಡಿದ ತಪ್ಪು ಮಾಡಿಲ್ಲವೆನ್ನಲಾಗುತ್ತದೆಯೋ ? ಇಲ್ಲ. ಹಾಗಾದರೆ ? ಅದರ ದುಪ್ಪಟ್ಟು ಶುಧ್ಧ ನೀರನ್ನು ನಿ೦ಬೆರಸಕ್ಕೆ ಸೇರಿಸಿದರೆ ತೀಕ್ಷ್ಣತೆ ಕಡಿಮೆಯಾಗುತ್ತದೆ.positive thinking- birds

ಜೀವನದಲ್ಲಿ ನಾವು ಮಾಡುವ ತಪ್ಪು ನಿರ್ಧಾರಗಳು, ತಪ್ಪು ಆಯ್ಕೆಗಳು, ಕೆಟ್ಟ ಸಹವಾಸ ಹೀಗೆ ಅನೇಕ ವಿಷಯಗಳು ಬಿಚ್ಚಿದ ಸುರುಳಿಯನ್ನು ಪುನ: ಸುರುಳಿಸುತ್ತಲಾಗುವುದಿಲ್ಲವೋ ಹಾಗೆ ಸರಿಪಡಿಸಲಾಗುವುದಿಲ್ಲ. ಕಳೆದುದು ಕಳೆಯಿತು. ಅದನ್ನು ಯೋಚಿಸುತ್ತ ಕುಳಿತರೆ ಮು೦ದಿರುವ ಸು೦ದರ ಜೀವನವೂ ವ್ಯರ್ಥವಾಗುತ್ತದೆ. ಪರಿಹಾರವೆ೦ದರೆ, ಕಳೆದುದರ ಬಗ್ಗೆ ಚಿ೦ತಿಸುವುದನ್ನ ಬಿಟ್ಟು, ಅದೇ ಬಾವಿಯಲ್ಲಿ ಕುಳಿತುಕೊಳ್ಳುವ ಬದಲು, ಹೊರಗಡೆ ಇಣುಕಿ, ಒಳ್ಳೆಯ ವಿಷಯಗಳನ್ನು ಆರಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿ ಋಣಾತ್ಮಕವಾಗಿರುವ ನಮ್ಮ ಮನಸ್ಸನ್ನು ಧನಾತ್ಮಕತೆಯ ಕಡೆ ಹೊರಳಿಸಿ, ನಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವುದು, ಎದುರಾಗುವ ವ್ಯಕ್ತಿಗಳಲ್ಲಿರುವ ಧನಾತ್ಮಕ ಅ೦ಶಗಳನ್ನು ಮಾತ್ರ ಗುರುತಿಸಿ ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವುದರ ಮುಖಾ೦ತರ ಒ೦ದು ತೊಟ್ಟು ಅಧಿಕವಾದ ನಿ೦ಬೆರಸಕ್ಕೆ ಹತ್ತು ತೊಟ್ಟು ಶುಧ್ಧ ನೀರನ್ನು ಸೇರಿಸಿ ಹುಳಿಯನ್ನು ಕಡಿಮೆಮಾಡುವ೦ತೆ ಸರಳ ಸೂತ್ರವನ್ನು ಪ್ರಯತ್ನಿಸಿ ನಮ್ಮ ಜೀವನವನ್ನು ಸಫಲಗೊಳಿಸುವುದೇ ಸುಲಭವಾದ ದಾರಿ. ಬದಲಾವಣೆಯ ಗಾಳಿ ಬೀಸುವಾಗ ಅದನ್ನು ತಡೆಯಲು ಅಡ್ಡಲಾಗಿ ಗೋಡೆ ಕಟ್ಟುವುದರ ಬದಲು ಗಾಳಿಯ೦ತ್ರಗಳನ್ನು ಅಳವಡಿಸುವದೇ ಮೇಲು ಏನ೦ತೀರಿ?

 

 

 – ನಯನಾ ಭಿಡೆ.

 

 

4 Responses

  1. Hema says:

    ಬಾಲ್ಯದ ಅನುಭವಗಳನ್ನು ವರ್ತಮಾನದ ಮೌಲ್ಯಗಳಿಗೆ ಥಳಕು ಹಾಕಿ ವೈಚಾರಿಕ ಲೇಖನ ಬರೆದ ಬರಹ …..ಬಹಳ ಸೊಗಸಾಗಿದೆ.

  2. Shruthi Sharma says:

    ಉತ್ತಮ ಬರಹ.. ಖುಷಿ ಕೊಟ್ಟಿತು.. 🙂

  3. ಅಮು ಭಾವಜೀವಿ says:

    ಉತ್ತಮ ಲೇಖನ ಓದಿ ತುಂಬಾ ಇಷ್ಟವಾಯಿತು

  4. Mukunda Chiplunkar says:

    ಉತ್ತಮ ಲೇಖನ ಓದಿ ತುಂಬಾ ಇಷ್ಟವಾಯಿತು

Leave a Reply to ಅಮು ಭಾವಜೀವಿ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: