ಸುಮಧುರ ಸುರಹೊನ್ನೆ..!

Share Button

ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದಾಗ, ಒಂದು ದಿನ ಬೆಳ್ಳಂಬೆಳಗ್ಗೆ ನನಗೆ ಅರುವತ್ತು ವರ್ಷವಾಯಿತೆಂದು ರವಿ ಮೂಡಣದಿ ಬಂದು ಘಂಟಾಘೋಷವಾಗಿ ಹೇಳಿದರೂ ಆ ಸತ್ಯವನ್ನು ಅರಗಿಸಿಕೊಳ್ಳಲಾಗಲಿಲ್ಲ. ಮುನ್ನಾ ದಿನದ ರಾತ್ರಿವರೆಗೂ ಎಡೆಬಿಡದೆ ಬರುತ್ತಿದ್ದ ದೂರವಾಣಿ ಕರೆಗಳಿಗೆ ಉತ್ತರಿಸುತ್ತಿದ್ದವಳಿಗೆ, ಆ ದಿನದಿಂದ ಒಮ್ಮೆಲೇ ಎಲ್ಲವೂ ಸ್ತಬ್ಧ, ನೀರವ ಮೌನ. ಕಠೋರ ಸತ್ಯವನ್ನು ಅರಗಿಸಿಕೊಳ್ಳುವುದು ಯಾವಾಗಲೂ ಕಷ್ಟ! ನೀರಿನಿಂದ ತೆಗೆದ ಮೀನಿನಂತೆ ಮನಸ್ಸು ವಿಲವಿಲ ಒದ್ದಾಡಿತು. ಶಾರೀರಿಕವಾಗಿ ಮನೆಕೆಲಸದಲ್ಲಿ ತೊಡಗಿಕೊಂಡರೂ, ಮನಸ್ಸಿಗೆ ಕೆಲಸ ಬೇಕಿತ್ತು. ನಿವೃತ್ತಿ ಬಳಿಕ ಓದಲೆಂದು ಪೇರಿಸಿಟ್ಟಿದ್ದ ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಗುಡ್ಡೆಹಾಕಿ ಓದಲಾರಂಭಿಸಿದೆ.

ಹಾಗೆಯೇ ಒಮ್ಮೆ ನಮ್ಮ ಬಂಧು ಹಾಗೂ ಗೆಳತಿ ಹೇಮಮಾಲಾರಲ್ಲಿ ಮಾತನಾಡುತ್ತ್ತಿದ್ದಾಗ ವಿಷಯವೊಂದನ್ನು ತಿಳಿಸಿದರು. ಪ್ರತಿಷ್ಠಿತ ಅಂತರಾಷ್ಟ್ರೀಯ ಕಂಪೆನಿಯೊಂದರಲ್ಲಿದ್ದ ಅವರು ಸ್ವಯಂನಿವೃತ್ತಿ ಪಡೆದು ಪ್ರವೃತ್ತಿಯಾಗಿ ಅವರಿಷ್ಟದ “ಸುರಹೊನ್ನೆ” ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ನಡೆಸುತ್ತಿದ್ದರು. ಅದರಲ್ಲಿ, ಆರಂಭಿಕ ಬರಹಗಾರರಿಗೆ ಅತ್ಯಂತ ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ, ಬರೆಯುವ ಹವ್ಯಾಸವಿರುವವರೆಲ್ಲರಿಗೂ ಎಲ್ಲಾ ತರಹದ ಸದಭಿರುಚಿ ಲೇಖನ, ಕವನಗಳನ್ನು ಆಹ್ವಾನಿಸುತ್ತಿದ್ದುದರಿಂದ. ನಾನೂ ಏನಾದರೂ ಬರೆದು ಕಳಿಸುವಂತೆ ಹುರಿದುಂಬಿಸುವುದರ ಜೊತೆಗೆ ಸೂಕ್ತ ಸಲಹೆಗಳನ್ನೂ ಇತ್ತರು. ಹಾಗೆಯೇ ನನ್ನ ಮೊತ್ತ ಮೊದಲ ಲೇಖನ “ಸುರಹೊನ್ನೆ”ಯಲ್ಲಿ ಪ್ರಕಟವಾಯಿತು. ಹಾಗೆಯೇ, ಅಲ್ಪ ಸ್ವಲ್ಪ ಬರೆಯುವ ಹವ್ಯಾಸಕ್ಕೂ ನಾಂದಿಯಾಯಿತು.  ಬಂದ ಯಾವುದೇ ತರಹದ ಬರಹಗಳು ಓದುಗರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಸೂಕ್ತ ಚಿತ್ರಗಳ ಅಳವಡಿಕೆ ಇವರ ಹೆಗ್ಗಳಿಕೆ.


ಲೇಖನಗಳ ವಿವಿಧತೆಯನ್ನು ಕಾಪಾಡಲು ಹಾಗೂ ಓದುಗರಿಗೆ ಅನುಕೂಲವಾಗುವಂತೆ ಬೊಗಸೆಬಿಂಬ, ಲಹರಿ, ಬೆಳಕು-ಬಳ್ಳಿ, ಪಯಣ, ಪುಸ್ತಕ, ವ್ಯಕ್ತಿಪರಿಚಯ, ಸೂಪರ್ ಪಾಕ, ಯೋಗ, ಆರೋಗ್ಯ, ಇಂಚರ ಮುಂತಾದ ವೇದಿಕೆಗಳ ಬೆಳಕಿಂಡಿಗಳನ್ನು ಲಗತ್ತಿಸುವುದರ ಜೊತೆಗೆ ಪತ್ರಿಕೆಯ ಅಂದವನ್ನು ಹೆಚ್ಚಿಸಿದ್ದಾರೆ. ಓದುಗ ಬಂಧುಗಳ ಮೆಚ್ಚುಗೆ, ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಆದ್ಯತೆಯನ್ನು ನೀಡಿ ಸುರಗಿಮಾಲೆಯು ತನ್ನ ಸುಗಂಧವನ್ನು ಎಲ್ಲೆಲ್ಲೂ ಹರಡುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇದೆಲ್ಲದರ ಜೊತೆಗೆ ಈ ಅಂತರ್ಜಾಲ ಪತ್ರಿಕೆಯ ನಿರ್ವಹಣೆಯ ವೆಚ್ಚವನ್ನು ತಮ್ಮ ಕೈಯಿಂದಲೇ ವ್ಯಯಿಸಿಕೊಂಡು ಯಾವುದೇ ಆದಾಯವನ್ನು ಇದರಿಂದ ನಿರೀಕ್ಷಿಸದೆ ತಮ್ಮ ಮನಃತೃಪ್ತಿಗೋಸ್ಕರ ಮಾತ್ರ ಕಳೆದ ನಾಲ್ಕು ವರ್ಷಗಳಿಂದ ಎಡೆಬಿಡದೆ ನಿರ್ವಹಿಸಿಕೊಂಡು ಬಂದಿರುವುದು ಬಹು ಪ್ರಶಂಸನೀಯ ಹಾಗೂ ಅವರ ಸಹೃದಯತೆಗೆ ಒಂದು ಉದಾಹರಣೆ. ಪ್ರತೀ ಗುರುವಾರದಂದು “ಸುರಹೊನ್ನೆ”ಯಲ್ಲಿ ಹೊಸ ಲೇಖನಗಳ ಪ್ರಕಟಣೆ ಹಾಗೂ ಫೇಸ್‌ಬುಕ್‌ನಲ್ಲಿ ,”ಸುರಹೊನ್ನೆ ಲೇಖಕ ವಾಚಕರ ಬಳಗ” ವೆಂಬ ಗುಂಪನ್ನು ನಿರ್ವಹಿಸುತ್ತಾ ಅದರಲ್ಲಿಯೂ ಆ ಲೇಖನಗಳನ್ನು ಪ್ರಕಟಿಸಿ ಲೇಖನಗಳು ಹೆಚ್ಚು ಓದುಗರನ್ನು ತಲಪಲು ಕಾರಣೀಕರ್ತರಾಗಿರುತ್ತಾರೆ. ಇದೀಗ ಐದನೇ ವಸಂತದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಪುಟ್ಟ ಕೂಸು ಬೆಳೆದು ನಾಡಿನಾದ್ಯಂತ ಕೀರ್ತಿ ತುಂಬಿ ಬೆಳಗಲೆಂದು ಆಶಿಸೋಣ.

-ಶಂಕರಿ ಶರ್ಮ, ಪುತ್ತೂರು.

1 Response

  1. ಮಾಲತೇಶ ಹುಬ್ಬಳ್ಳಿ says:

    ೫ ನೇ ವಸಂತಕ್ಕೆ ಕಾಲಿರಿಸುತ್ತಾ ನಮಗೆಲ್ಲ ಸಾಹಿತ್ಯದ ರಸದೌತಣ ಒದಗಿಸುತ್ತಿರುವ “ಸುರಹೊನ್ನೆ “ಗೆ ಹಾಗು ಇದಕ್ಕೆ ಕಾರಣೀಭೂತರಾದ ಶ್ರೀಮತಿ ಹೇಮಮಾಲಾ ಅವರಿಗೆ ಹಾರ್ದಿಕ ಅಭಿನಂದನೆಗಳು.ಪತ್ರಿಕೆ ಉತ್ತರೋತ್ತರ ಅಭಿವೃದ್ಧಿ ಹೊ಼ದಲಿ ಎಂದು ಆಶಿಸುತ್ತೇವೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: